ಮುಖಪುಟ >> ಗೋಕರ್ಣ, ಶ್ರೀರಾಮಚಂದ್ರಾಪುರ ಮಠ

ಗೋಕರ್ಣ ಮತ್ತು ಶ್ರೀರಾಮಚಂದ್ರಾಪುರ ಮಠ

..................................................................................................................................................

ಸನಾತನ ವೈದಿಕಧರ್ಮಪ್ರತಿಷ್ಠಾಪನಾಚಾರ್ಯ ಎಂದೇ ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾದ ಶ್ರೀಮದಾಚಾರ್ಯಶಂಕರಭಗವತ್ಪಾದರು ತಮ್ಮ ಶಿಷ್ಯ – ಪ್ರಶಿಷ್ಯರೊಂದಿಗೆ ಗೋಕರ್ಣಕ್ಕೆ ಆಗಮಿಸಿ, ಸಾರ್ವಭೌಮ ಮಹಾಬಲನನ್ನು ವಿಧಿವತ್ತಾಗಿ ಅರ್ಚಿಸಿದರು. ಅಲ್ಲದೇ ಆಸ್ತಿಕಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ ಶ್ರೀಮದಾಚಾರ್ಯರು ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದರು…ತಮ್ಮ ಪ್ರಶಿಷ್ಯರೂ, ಸುರೇಶ್ವರಾಚಾರ್ಯರ ಜ್ಯೇಷ್ಠಶಿಷ್ಯರೂ ಆಗಿದ್ದ ಶ್ರೀವಿದ್ಯಾನಂದಾಚಾರ್ಯರನ್ನು ಈ ಪೀಠಕ್ಕೆ ಅಧಿಪತಿಯನ್ನಾಗಿ ನಿಯಮಿಸಿ, ಮಹರ್ಷಿ‌ಅಗಸ್ತ್ಯರಿಂದ ಸಂಪೂಜಿತವಾಗಿ ವರದಮುನಿಗಳಿಂದ ಪ್ರದತ್ತವಾದ ತಪೋರಾಮಾದಿವಿಗ್ರಹಗಳನ್ನೂ, ಚಂದ್ರಮೌಳೀಶ್ವರಲಿಂಗ ಹಾಗೂ ಪಾದುಕೆಗಳನ್ನು ಅವರಿಗಿತ್ತು ಯತಿಶೇಷ್ಠನಾದ ವಿದ್ಯಾನಂದನೇ, ನಿತ್ಯವೂ ವಿಧಿವತ್ತಾಗಿ ಮಹಾಬಲನ ಆತ್ಮಲಿಂಗವನ್ನು ಅರ್ಚಿಸುತ್ತಾ, ಗೋಕರ್ಣಮಂಡಲಾಧೀಶ್ವರನಾಗಿ ಧರ್ಮಮಾರ್ಗಪ್ರದರ್ಶಕನಾಗು ಎಂದು ಆದೇಶಿಸಿದರು. ಹಾಗೂ ರಘುಕುಲದಲ್ಲಿ ಅನಿರತ ಅಸಾಧಾರಣಗುಣಗಳಿಂದ ಸರ್ವಶ್ರೇಷ್ಠನಾದ ಶ್ರೀರಾಮಚಂದ್ರನೇ ಇಲ್ಲಿ ಆರಾಧ್ಯ ದೇವತೆಯಾದ್ದರಿಂದ ಈ ಮಠವು ’ರಘೂತ್ತಮಮಠ’ವೆಂದೇ ಪ್ರಸಿದ್ಧವಾಗಲಿ ಎಂದು ಆಶೀರ್ವದಿಸಿದರು.

ಶ್ರೀಚಿದ್ಭೋಧಭಾರತೀಮಹಾಸ್ವಾಮಿಗಳ ಮೂಲಕ ಮುಂದುವರೆದ ಈ ಅವಿಚ್ಛಿನ್ನಗುರುಪರಂಪರೆಯ ಶಾಂಕರಪೀಠದ ಹತ್ತನೆಯ ಅಧಿಪತಿಗಳಾಗಿದ್ದ ಶ್ರೀಚಿದ್ಭೋಧಭಾರತೀಮಹಾಸ್ವಾಮಿಗಳಿಗೆ ವಿಜಯನಗರಸಾಮ್ರಾಜ್ಯಸ್ಥಾಪಕರಾದ ಹಾಗೂ ಶೃಂಗೇರಿಶಾರದಾಪೀಠಾಧಿಪತಿಗಳಾದ ಶ್ರೀವಿದ್ಯಾರಣ್ಯಮಹಾಸ್ವಾಮಿಗಳು ತಮ್ಮ ಜ್ಯೇಷ್ಠಪರಂಪರೆಯ ಪೀಠ ಎಂಬ ಹಿನ್ನೆಲೆಯಲ್ಲಿ ಸಿಂಹಾಸನ, ಕಿರೀಟ ಮೊದಲಾದ ರಾಜಲಾಂಛನಗಳನ್ನು ಶ್ರೀಕ್ಷೇತ್ರಾಧೀಶ ಮಹಾಬಲೇಶ್ವರನ ಸನ್ನಿಧಿಯಲ್ಲಿತ್ತು ಗೌರವಿಸಿದರು. ಇದೇ ಸಮಯದಲ್ಲಿ ದೊರೆ ದೇವರಾಯನೂ ಸಹ ಈ ಪೀಠವನ್ನು ರಾಜಗುರುಪೀಠ ಎಂದು ಸ್ಥಿರೀಕರಿಸಿ ಇನ್ನೂ ಕೆಲವು ರಾಜಮರ್ಯಾದೆಗಳನ್ನು ಸಮರ್ಪಿಸಿದ.

ಪರಮತಪಸ್ವಿಗಳೂ, ಲೋಕಾನುಗ್ರಹಾಕಾಂಕ್ಷಿಗಳೂ, ನಿಗ್ರಹಾನುಗ್ರಹಸಮರ್ಥರೂ ಆದ ಈ ರಘೂತ್ತಮಮಠದ ಪೀಠಾಧಿಪತಿಗಳು ಆಯಾ ಕಾಲದಲ್ಲಿ ಅಂದಿನ ಆಳರಸರಿಗೆ, ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನ ಮಾಡುತ್ತಿದ್ದುದೂ, ಅರಸರು ಶ್ರೀಕ್ಷೇತ್ರಾಧೀಶ ಮಹಾಬಲೇಶ್ವನ ಅಮೃತಪಡಿ, ನಿತ್ಯನೈಮಿತ್ತಿಕ ಕಟ್ಟಲೆಗಳು, ಯತಿಭಿಕ್ಷೆ ಮೊದಲಾದ ಧರ್ಮಕಾರ್ಯಗಳಿಗೆ ಅನೇಕ ಅಗ್ರಹಾರಗಳನ್ನೂ, ಭೂಮಿ – ಕಾಣಿಕೆಗಳನ್ನು ಉಂಬಳಿಯನ್ನಾಗಿ ಬಿಟ್ಟು ಪೀಠಾಧೀಶರ ತಪಸ್ಸಾಮ್ರಾಜ್ಯಾಭ್ಯುದಯಕ್ಕೆ ಅನುಕೂಲರಾಗಿದ್ದುದೂ ಶ್ರೀಮಠದಲ್ಲಿರುವ ಹಲವಾರು ಧರ್ಮಶಾಸನಗಳಿಂz ದೃಢಪಡುತ್ತದೆ.

ಈ ರಘೂತ್ತಮಮಠದ ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀಮಠದ ಪರಂಪರೆಯ ಮೊದಲಿನ ರಾಘವೇಶ್ವರಭಾರತೀಮಹಾಸ್ವಾಮಿಗಳ ಕಾಲದಲ್ಲಿ (ಕ್ರಿ. ಶ. ಸುಮಾರು ೧೪೦೦) ಅವರ ಶಿಷ್ಯರಾದ ಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳು ಕೆಳದಿಸಂಸ್ಥಾನದ ಆಳರಸರ ಭಕ್ತಿಶ್ರದ್ಧಾಪುರಸ್ಸರವಾದ ಪ್ರಾರ್ಥನೆಯಂತೆ ಕೆಳದಿ ಸಂಸ್ಥಾನಕ್ಕೆ ಸೇರಿದ ಹೊಸನಗರ ಸಮೀಪದ ಅಗಸ್ತ್ಯಾಶ್ರಮ ಪ್ರದೇಶದಲ್ಲಿ ನೂತನ ಮಠಾಯತನವೊಂದನ್ನು ನಿರ್ಮಿಸಿದರು. ರಾಮಚಂದ್ರಾಪುರ ಎಂಬ ಹೆಸರಿನಲ್ಲಿ ಉಂಬಳಿಯಾಗಿ ಬಂದ ಪ್ರದೇಶದಲ್ಲಿನ ಮಠಕ್ಕೆ ಶ್ರೀರಾಮಚಂದ್ರಾಪುರಮಠವೆಂದೇ ಹೆಸರಾಯಿತು. ಗೋಕರ್ಣದ ಶ್ರೀರಘೂತ್ತಮಮಠ ಹಾಗೂ ಶ್ರೀಕ್ಷೇತ್ರ ಗೋಕರ್ಣಮಹಾಬಲೇಶ್ವರ ದೇವಾಲಯಗಳ ಆಡಳಿತವ್ಯವಸ್ಥೆಯೂ ಸಹಜವಾಗಿಯೇ ಹೊಸನಗರದ ಶ್ರೀರಾಮಚಂದ್ರಾಪುರಮಠಕ್ಕೆ ಸಂದಿತು. ಇದು ಗೋಕರ್ಣಶ್ರೀರಘೂತ್ತಮಮಠವು ಶ್ರೀರಾಮಚಂದ್ರಾಪುರಮಠವೆಂದು ನಾಮಾಂತರಗೊಂಡ ಬಗೆ.

ಕ್ರಮೇಣ ಬದಲಾದ ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಶ್ರೀಕ್ಷೇತ್ರಗೋಕರ್ಣದ ಮಹಾಬಲೇಶ್ವರ ದೇವಾಲಯದ ನಿರ್ವಹಣಾ ಸ್ವರೂಪ ಪರಿವರ್ತನೆ ಹೊಂದಿದರೂ ದೇವಾಲಯದ ಸಂಪೂರ್ಣ ಸ್ವಾಮಿತ್ವವು ಶ್ರೀಮಠದ ಸುಪರ್ದಿಯಲ್ಲಿಯೇ ಇತ್ತು ಎಂಬುದಕ್ಕೆ ಶ್ರೀಕ್ಷೇತ್ರದ ಅಶೇಷವಿದ್ವನ್ಮಹಾಮಂಡಳಿಯವರು ಶ್ರೀiಠಕ್ಕೆ ನಿವೇದನೆ ಸಲ್ಲಿಸಿ ನಿತ್ಯ – ನೈಮಿತ್ತಿಕ ಪೂಜಾಕೈಂಕರ್ಯಗಳ ವಿಷಯದಲ್ಲಿ ಮಾರ್ಗದರ್ಶನ ಕೋರಿದ ದಾಖಲೆಗಳು ಸಾಕ್ಷಿಯಾಗಿವೆ. ಅಂತೆಯೇ ೧೯೮೩ರಲ್ಲಿ ನಡೆದ ಶ್ರೀಮಹಾಬಲೇಶ್ವರ ದೇವರ ಅಷ್ಟಬಂಧಮಹೋತ್ಸವವು ಶ್ರೀಮಠದ ಆಗಿನ ೩೫ನೆಯ ಪೀಠಾಧಿಪತಿಗಳಾಗಿದ್ದ ಬ್ರಹ್ಮಲೀನ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆದದ್ದೂ ಸಹ ಉಲ್ಲೇಖನೀಯ.

೨೦೦೪ರಲ್ಲಿ ಶ್ರೀಮಹಾಬಲೇಶ್ವರನ ದೇವಾಲಯದ ಧರ್ಮದರ್ಶಿಗಳು ಮೃತರಾಗಿ ದೇವಾಲಯದ ನಿರ್ವಹಣೆಯು ಅನಾಯಕವಾಯಿತು. ೨೦೦೮ರಲ್ಲಿ ಸ್ಥಳೀಯ ಉಪಾಧಿವಂತ ಮಂಡಲ, ವೈದಿಕ ಸಮುದಾಯ, ಪಂಚಾಯತ್, ಶಾಸಕರು ಇವರೆಲ್ಲರ ಕೋರಿಕೆಯಂತೆ ಸರ್ಕಾರವು ಈ ಹಿಂದೆ ಹಿಂದೂ ಧಾರ್ಮಿಕ ದೇವಾಲಯಗಳ ಏಕರೂಪಶಾಸನದನ್ವಯ ಹೊರಡಿಸಿದ ಅಧಿಸೂಚನೆಯ ಪಟ್ಟಿಯಲ್ಲಿ ತಪ್ಪಾಗಿ ಸೇರ್ಪಡೆ ಹೊಂದಿದ್ದ ದೇವಾಲಯದ ಹೆಸರನ್ನು ಪಟ್ಟಿಯಿಂದ ಹೊರತು ಪಡಿಸಿದ್ದಲ್ಲದೆ ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಮಠದ ೩೬ನೇಯ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಗೆ ಹಸ್ತಾಂತರಿಸಿತು.

೨೦೦೮ ಆಗಸ್ಟ್ ೧೫ರಂದು ಶ್ರೀಮಠದ ಸುಪರ್ದಿಗೆ ಬಂದ ಅನಂತರ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇವಾಲಯ ಮತ್ತು ಪರಿಸರದಲ್ಲಿ ಸ್ವಚ್ಛತೆಗೆ ಆದ್ಯ ಗಮನ ನೀಡಿ ಭಕ್ತರಿಗೆ ಕುಡಿಯುವ ನೀರು ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವರ್ಷದ ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ಗೋಕರ್ಣಮಂಡಲವ್ಯಾಪ್ತಿಯ ೩೬ಕ್ಕೂ ಮಿಕ್ಕಿದ ವಿವಿಧ ಸಮಾಜ ಬಂಧುಗಳಿಗೆ ಸಾಮೂಹಿಕ ಪೂಜೆಯ ಅವಕಾಶ ಕಲ್ಪಿಸಲಾಗಿತ್ತು. ಮೇಲ್ವರ್ಗದಿಂದ ಪ್ರಾರಂಭಿಸಿ ತೀರ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮಾಜ ಎಂದೇ ಗುರುತಿಸಲ್ಪಟ್ಟ ಅಗೇರ, ಹಳ್ಳೇರ ಮೊದಲಾದ ಸಮಾಜದ ಶಿಷ್ಯ ಬಂಧುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡು ಕ್ಷೇತ್ರಾಭಿವೃದ್ಧಿಯ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಶ್ರೀಗುರುಪೀಠಕ್ಕೆ ನಿವೇದಿಸಿಕೊಂಡರು. ಗುರುಪೀಠ ರಹಿತವಾಗಿದ್ದ ನಾಡವರ ಸಮಾಜ ಹಾಗೂ ಹಳ್ಳೇರ ಸಮಾಜದ ಬಂಧುಗಳನ್ನು ಶ್ರೀರಾಮಚಂದ್ರಾಪುರಮಠದ ಗುರುಪೀಠವು ತಮ್ಮ ಮಠದ ಶಿಷ್ಯರೆಂದು ಅಂಗೀಕರಿಸಿತು. ಇದೇ ಸಂದರ್ಭದಲ್ಲಿ ಗೋಕರ್ಣ ಪರಿಸರದ ಗಂಗಾವಳಿ, ದುಬ್ಬನಸಸಿ, ಹಿರೇಗುತ್ತಿ, ತದಡಿ, ಕಡಮೆ ಮೊದಲಾದ ಒಂಬತ್ತು ಗ್ರಾಮಗಳಲ್ಲಿ ಗ್ರಾಮಸಂಪರ್ಕಸಭೆಯನ್ನು ನಡೆಸಲಾಯಿತು. ಶ್ರೀಕ್ಷೇತ್ರ ಹಾಗೂ ಪರಿಸರದ ಗ್ರಾಮಗಳ ಅಭಿವೃದ್ಧಿಯ ವಿಷಯದಲ್ಲಿ ಎಲ್ಲ ಗ್ರಾಮಸ್ಥರೂ ನಿರಂತರ ಸಹಕಾರವನ್ನ ಘೋಷಿಸಿದರಲ್ಲದೆ ದೇವಾಲಯವು ಶ್ರೀಮಠದ ನಿರ್ವಹಣೆಗೊಳಪಟ್ಟದ್ದನ್ನು ಸ್ವಾಗತಿಸಿದರು.

ಗೋಕರ್ಣ ಹಾಗೂ ಪರಿಸರದ ಹಾಲಕ್ಕಿ ಸಮಾಜದ ಬಂಧುಗಳು ಗೋಕರ್ಣದ ವೀರಭದ್ರ ದೇವಾಲಯದ ನವೀಕರಣ ಕಾರ್ಯವನ್ನು ತಮ್ಮ ಸಮಾಜದ ವತಿಯಿಂದ ನಡೆಸುವುದಾಗಿ ವಾಗ್ದಾನ ಮಾಡಿದರು. ಹಾಗೆಯೇ ಹಿರೇಗುತ್ತಿ, ತೊರ್ಕೆ ಗ್ರಾಮಸ್ಥರು ಮಾದನಗೇರಿಯಲ್ಲಿ ಸ್ವಾಗತಮಹಾದ್ವಾರವನ್ನು ನಿರ್ಮಿಸಿ ಕೊಡಲು ಮುಂದಾಗಿದ್ದು ಉಳಿದ ಅನೇಕ ಸಮಾಜಗಳ ಬಂಧುಗಳೂ ಸಹ ಶ್ರೀಮಹಾಬಲೇಶ್ವರದೇವಾಲಯದ ನವೀಕರಣ ಕಾರ್ಯದಲ್ಲಿ ತಮ್ಮ ಪಾಲನ್ನೂ ಶ್ರೀಗುರುಪೀಠಕ್ಕೆ ನಿವೇದಿಸಿಕೊಂಡಿದ್ದಾರೆ.

ಶರನ್ನವರಾತ್ರಿಯ ವಿಜಯದಶಮಿಯ ಶುಭದಿನದಂದು ಶ್ರೀದೇವಾಲಯದ ವತಿಯಿಂದ ಯಾತ್ರಿಕಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆಯಾದ ’ಅಮೃತಾನ್ನ ವನ್ನು ಪ್ರಾರಂಭಿಸಲಾಗಿದ್ದು ಪ್ರತಿದಿನ ಎರಡು ಸಹಸ್ರಕ್ಕೂ ಮೀರಿದ ಭಕ್ತರು ಈ ವ್ಯವಸ್ಥೆಯ ಪ್ರಯೋಜನ ಪಡೆಯುತ್ತಿದ್ದಾರೆ. ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಶ್ರೀಕ್ಷೇತ್ರ ಗೋಕರ್ಣ ಪುನರುತ್ಥಾನ ಮಹಾಸಂಕಲ್ಪದ ಅಂಗವಾಗಿ ಗೋಕರ್ಣ ಮತ್ತು ಪರಿಸರದಲ್ಲಿನ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಸಹಸ್ರಧೇನುಪ್ರದಾನರೂಪವಾದ ಸಾವಿರಗೋದಾನ ಕಾರ್ಯಕ್ರಮದ ಶುಭಾರಂಭವನ್ನು ದಿ. ೧೦. ೧೦. ೨೦೦೮ ರಂದು ನಡೆಸಲಾಗಿದೆ. ಜಗನ್ಮಾತೆಯಾದ ಗೋವಿನಿಂದ ಎಲ್ಲ ರೀತಿಯ ಸಮೃದಿಯನ್ನು ಪಡೆಯಲು ಸಾಧ್ಯ ಎಂಬುದನ್ನು ನಿರೂಪಿಸಲೆಂದೇ ಶ್ರೀದೇವಾಲಯದ ವತಿಯಿಂದ ಒಂದು ಸಹಸ್ರ ದೇಶೀಗೋವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ನಿರ್ಧರಿಸಿದ್ದು, ೧೦ರಂದು ಸರ್ಕಾರದ ಮಾನ್ಯಸಚಿವರು, ವಿಧಾನಪರಿಷತ್ ಸಭಾಪತಿಗಳು ಮತ್ತು ಶಾಸಕರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ೧೦೮ ಗೋವುಗಳನ್ನು ವಿವಿಧ ಸಾಮಾಜಿಕ ಅರ್ಹ ವ್ಯಕ್ತಿಗಳಿಗೆ ನೀಡಲಾಗಿದೆ. ಬರುವ ಒಂದು ತಿಂಗಳ ಅವಧಿಯಲ್ಲಿ ಉಳಿದ ಹಸುಗಳನ್ನು ವಿತರಣೆ ಮಾಡಲಿದ್ದು ಯೋಗ್ಯ ಫಲಾನುಭವಿಗಳನ್ನು ಗುರುತಿಸಲಾಗಿದೆ.

---------------------------------------------------------------------------------------------------------------------------------------------------------------------------------------

4 Responses to “ಗೋಕರ್ಣ ಮತ್ತು ಶ್ರೀರಾಮಚಂದ್ರಾಪುರ ಮಠ”

  1. Dinesh Samant

    It’s Great.

    February 25th, 2009 | 5:50 pm
  2. MUSTIBHIKYSHA ……. JAGATTHINA HASIVANNU NIVARISALU IDARINDA MATHRA SADYA…..

    May 24th, 2009 | 1:12 pm
  3. hari prasad

    I AM A HINDU AGED ONLY 24 I AM VISITING ALL HOLY PLACES OF INDIA IN LAST YEAR I VISITED KASHI…….. NOW I AM FULL IMMPRESSED WITH GOKARNA ….. I AM VISITING GOKARNA ON 24TH OF THIS MONTH ITS A DUTY OF EVERY HINDU TO VISIT OUR HOLY PLACES

    December 7th, 2009 | 7:20 pm
  4. badarinath

    PLS MENTION THEPLACES FORTHE TOURISTS TO STAY
    ITS CHARGES,FACILITIES ARRANGED FROM THE MUTT

    December 28th, 2009 | 5:46 pm

Leave a Reply