ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಚಿವರ ಭೇಟಿ
Tuesday, May 1st, 2012 -
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಅಕ್ಷಯ ತೃತೀಯೇ ಹಾಗೂ ಬಸವ ಜಯಂತಿಯ ಪುಣ್ಯ ದಿನವಾದ ಇಂದು ಕರ್ನಾಟಕ ಸರಕಾರದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ವಿಶೇಶ್ವರ ಹೆಗಡೆ ಕಾಗೇರಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ ಇವರು, ಕುಮಟಾ ಶಾಸಕರಾದ ಮಾನ್ಯ ಶ್ರೀ ದಿನಕರ ಶೆಟ್ಟಿ ಇವರು ಭೇಟಿ, ಅಭಿಷೇಕ-ಪೂಜಾ ಸೇವೆ ಕೈಗೊಂಡರು.
ರಾಜ್ಯವನ್ನು ಕಾಡುತ್ತಿರುವ ಬರ ಹಾಗೂ ಪ್ರಾಕೃತಿಕ ಉತ್ಪಾತಗಳಿಂದ ಜನತೆಯನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿಕೊಂಡರು. ಶ್ರೀ ದೇವಾಲಯದ ಗರ್ಭಗುಡಿಯಲ್ಲಿನ ವಾತಾವರಣವನ್ನು ತಂಪುಗೊಳಿಸಲು ಹವಾನಿಯಂತ್ರಕ ಅಳವಡಿಸುವ ಮೂಲಕ ಭಕ್ತರ ಸಂಕಷ್ಟ ನಿವಾರಿಸಿದ ಶ್ರೀ ದೇವಾಲಯದ ಆಡಳಿತವನ್ನು ಪ್ರಶಂಸಿಸಿದರು. ಶ್ರೀ ದೇವಾಲಯದ ಪೂಜಾ ಹಾಗೂ ದರ್ಶನ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ನಾಗರಾಜ ಶೆಟ್ಟಿ ಯವರೂ ಶ್ರೀ ದೇವಾಲಯದ ಭಕ್ತಾ-ಜನೋಪಯೋಗೀ ಕಾರ್ಯಕ್ರಮಗಳನ್ನು ಕೊಂಡಾಡಿದರು.
ವೇ. ನಾಗರಾಜ ಪ್ರಸಾದ, ವೇ. ವಿಶ್ವನಾಥ ಭಟ್ಟ ಪೂಜಾ ವಿನಿಯೋಗ ನೆರವೇರಿಸಿಕೊಟ್ಟರು. ಶ್ರೀ ದೇವಾಲಯದ ವತಿಯಿಂದ ಶ್ರೀ ಜಿ.ಕೆ. ಹೆಗಡೆ ಶ್ರೀಯುತರನ್ನು ಸ್ವಾಗತಿಸಿದರು.