

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಕರ್ಣ.ಸೆ ೨೨. ಪರಮಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ಸಮಾಜೋನ್ಮುಖಿಯಾದ ಹಲವಾರು ಕಾರ್ಯಕ್ರಮಗಳಲ್ಲಿ ಒಂದಾದ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಬದುಕಿನ ಸರ್ವಾಂಗೀಣವಾದ ಔನ್ನತ್ಯಕ್ಕೋಸ್ಕರ ಮತ್ತು ಸ್ವಸ್ಥಜೀವನಕ್ಕಾಗಿ ಶ್ರೀ ಮಹಾಬಲೇಶ್ವರ ದೇವಾಲಯದ ಆಶ್ರಯದಲ್ಲಿ ಯೋಜಿಸಿರುವ ಶ್ರೀ ಕ್ಷೇತ್ರ ಗೋಕರ್ಣ ಅಭಿವೃದ್ಧಿ ಸಮಿತಿಯ ” ಶ್ರೀ ಮಹಾಬಲ ಸುರಕ್ಷಾ ” ಯೋಜನೆಯನ್ವಯ ಗೋಕರ್ಣ ಮತ್ತು ಪರಿಸರದ ಗ್ರಾಮೀಣಪ್ರದೇಶಗಳಲ್ಲಿ ನಡೆಸಿಕೊಂಡು ಬರುತ್ತಿರುವ ಉಚಿತ ಆರೋಗ್ಯತಪಸಣಾಶಿಬಿರವನ್ನು ಇಂದು ೨೨ ರವಿವಾರದಂದು ಸಮೀಪದ ದಂಡೆಭಾಗದ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆಯಲ್ಲಿ ಆಯೋಜಿಸಲಾಗಿತ್ತು.ಅರವತ್ತುಮಂದಿ ಶಾಲಾಬಾಲಕ ಬಾಲಕಿಯರೂ ಸೇರಿದಂತೆ ಎರಡುನೂರ ಎಪ್ಪತ್ತುಕ್ಕೂ ಹೆಚ್ಚಿನ ಜನರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯಸ್ಥಿತಿಯ ತಪಾಸಣೆಯನ್ನು ಮಾಡಿಸಿಕೊಂಡಿದ್ದಲ್ಲದೆ ಉಚಿತವಾಗಿ ಔಷಧವನ್ನೂ ಪಡೆದರು.ಪ್ರಾರಂಭದಲ್ಲಿ ಕುಮುಟಾದ ಪ್ರಸಿದ್ಧವೈದ್ಯರೂ ಸ್ತ್ರೀರೋಗತಜ್ಞರೂ ಆದ ಡಾ.ಜಿ.ಜಿ.ಹೆಗಡೆಯವರು ಇತ್ತೀಚೆಗಿನ ದಿನಗಳಲ್ಲಿ ಮಾತೆಯರು ಹಾಗೂ ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಹಾಗೂ ಪೌಷ್ಟಿಕ ಆಹಾರದ ಕೊರತೆಯ ಬಗ್ಗೆ ಮಾತನಾಡಿ ಸ್ಥಳೀಯವಾಗಿ ಅತ್ಯಂತಕಡಿಮೆಮೌಲ್ಯದಲ್ಲಿ ದೊರೆಯುವ ತರಕಾರಿ,ಆಹಾರಪದಾರ್ಥಗಳ ಮೂಲಕವೇ ಹೇಗೆ ಸ್ವಸ್ಥಜೀವನವನ್ನು ನಡೆಸಬಹುದೆಂಬ ಬಗ್ಗೆ ರೋಗಿಗಳಿಗೆ ತಿಳುವಳಿಕೆ ನೀಡಿದರು. ಅಲ್ಲದೆ ಡಾ.ಅಶೋಕ ಭಟ್ ಹಳ್ಕಾರ ಅವರು ಮಾತನಾಡಿ ರೋಗವು ಬಂದನಂತರ ಚಿಕಿತ್ಸೆ ಮಾಡುವುದಕ್ಕಿಂತ ನಿಯತವಾದ ಆಹಾರಾದಿಗಳಿಂದ ಸ್ವಸ್ಥ ಆರೋಗ್ಯವನ್ನು ಹೇಗೆ ಪಡೆದುಕೊಳ್ಳಬಹುದೆಂಬುದನ್ನು ತಿಳಿಸಿದರು. ಶಿಬಿರದಲ್ಲಿ ಡಾ.ಜಿ.ಜಿ.ಹಗಡೆ, ಡಾ. ಅಶೋಕ ಭಟ್ ಹಳ್ಕಾರ, ಡಾ.ಶ್ರೀಧರ ಭಟ್ ಮೂರೂರು ಮತ್ತು ಡಾ.ಯು.ಜಿ.ಹೊಸ್ಮನೆಯವರು ಹಾಜರಿದ್ದು ರೋಗಿಗಳನ್ನು ಪರೀಕ್ಷಿಸಿ ಉಚಿತವಾದ ಔಷಧವನ್ನು ನೀಡಿದರು. ಜ್ಯೋತಿಯನ್ನು ಬೆಳಗಿಸುವ ಮೂಲಕ ಪ್ರಾರಂಭಗೊಂಡ ಶಿಬಿರದಲ್ಲಿ ಶ್ರೀ ಮುರಳೀಧರ ಪ್ರಭು ಸ್ವಾಗತಿಸಿ ಪೂಜ್ಯಶ್ರೀಗಳ ಸಮಗ್ರಗೋಕರ್ಣಕ್ಷೇತ್ರಾಭಿವೃದ್ಧಿಯ ಯೋಜನೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾದಿದರು.ಗೋಕರ್ಣ ಗ್ರಾಮಪಂಚಾಯತ ಸದಸ್ಯ ಶ್ರೀ ಮಹೇಶ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಅಭಿವೃದ್ಧಿಸಮಿತಿಯ ಶ್ರೀಮಂಜುನಾಥ ಭಟ್ ಸುವರ್ಣಗದ್ದೆ, ಶ್ರೀ ಬೀರಣ್ಣ ನಾಯಕ,ಶ್ರೀ ಶೇಖರ ನಾಯಕ, ಮೊದಲಾದ ಸದಸ್ಯರು ಉಪಸ್ಥಿತರಿದ್ದರು.ಶಾಲಾಮುಖ್ಯೋಪಾಧ್ಯಾಯ ಶ್ರೀ ಮಧುಕರ ನಾಯಕ ಹಾಗೂ ಸ್ಥಳೀಯ ಮಹಾಗಣಪತಿ ಯುವಕಸಂಘ ಬೇಲೇಹಿತ್ತಲಿನ ಅಧ್ಯಕ್ಷ ಶ್ರೀ ಸತೀಶ ಭಂಡಾರಿ ಹಾಗೂ ಪದಾಧಿಕಾರಿಗಳಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಮುರಳೀಧರ ಪ್ರಭು ಈ ಶಿಬಿರದ ಔಷಧಪ್ರಾಯೋಜಕತ್ವವನ್ನು ವಹಿಸಿದ್ದರು.