ಗೋಕರ್ಣ:ಮಾ.14.ವೇದಗಳಲ್ಲಿ ಪಶುಪತಿಯೆಂದೇ ವರ್ಣಿತನಾದ ಶ್ರೀಮಹಾಬಲೇಶ್ವರನ ಪ್ರೀತ್ಯರ್ಥವಾಗಿ ಸಾವಿರನಂದಿಗಳ ಸಾವಿರನಂದಿಗಳ ಬೃಹತ್ ಗೋಶಾಲೆಯೊಂದನ್ನು ಸಮೀಪದ ಅಶೋಕೆಯ ಮೂಲಮಠದ ಪ್ರದೇಶದಲ್ಲಿ ಸ್ಥಾಪಿಸುವುದಾಗಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.ನಂದಿಯ ಶೃಂಗದ ಮೂಲಕ ಈಶ್ವರದರ್ಶನವನ್ನು ಮಾಡುವ ಪದ್ಧತಿಯಿದ್ದು ಈ ನಂದಿಯು ಸಾಂಕೇತಿಕವಾಗಿ ಜೀವಾತ್ಮನನ್ನು ಪರತಿನಿಧಿಸುತ್ತದೆ,ನಂದಿಯು ಸದಾ ಈಶ್ವರನ ಎದುರಿಗೇ ಇದ್ದು ಪರಮೇಶ್ವರನನ್ನು ಅವಲೋಕಿಸುತ್ತಿರುವುದೋ ಅದೇರೀತಿಯಲ್ಲಿ ಭಕ್ತನೂ ಸಹ ಆ ಈಶ್ವರನ ಸಾಕ್ಷಾತ್ಕಾರಕ್ಕಾಗಿ ಪರಮಾತ್ಮನನ್ನು ತದೇಕಚಿತ್ತನಾಗಿ ಧ್ಯಾನಿಸಬೇಕು ಎಂಬುದೇ ಶಿವದೇವಾಲಯಗಳಲ್ಲಿ ನಂದಿಯನ್ನು ಪ್ರತಿಷ್ಠಾಪಿಸುವ ುದ್ದೇಶವಾಗಿದೆ ಎಂದೂ ಸಹ ಪೂಜ್ಯ ಶ್ರೀಗಳು ಅಭಿಪ್ರಾಯ ಪಟ್ಟರು.ಅಶೋಕೆಯ ಮೂಲಮಠದ ಪುನರ್ನಿಮಾಣಕ್ಕಾಗಿ ಆಯೋಜಿತವಾಗಿದ್ದ “ಭೂಪರಿಗ್ರಹ” ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು ನಾಡಿನಲ್ಲಿ ಹಲವಾರು ಗೋಶಾಲೆಗಳಿವೆ ಆದರೆ,ಕೇವಲ ನಂದಿಗೋಶಾಲೆ ಮಾತ್ರ ಎಲ್ಲೂ ಇಲ್ಲ.ಆದ್ದರಿಂದ ಈ ಕೊರತೆಯನ್ನು ತುಂಬಲು ಅಶೋಕೆಯಲ್ಲಿ ಒಂದುಸಾವಿರನಂದಿಗಳ ಈ ಗೋಶಾಲೆಯನ್ನು ಸ್ಥಾಪಿಸಲಾಗುತ್ತಿದೆಯೆಂದೂ ಶ್ರೀಗಳು ಹೇಳಿದರು.ಗೋವು ಕೇವಲ ಪ್ರಾಣಿಯಲ್ಲ,ಅದು ಭಾರತದಂತಹ ರಾಷ್ಡ್ರಕ್ಕೆ ಆರ್ಥಿಕ ಬೆನ್ನುಲುಬು.ಇಂದು ಸುಧಾರಿತಕೃಷಿಪದ್ದತಿಯ ಹೆಸರಿನಲ್ಲಿ ಗೋವನ್ನು ಕಡೆಗಣಿಸಿ ರಾಸಾಯನಿಕಗೊಬ್ಬರ ಕೀಟನಾಶಕಗಳನ್ನು ಬಳಸಿ ಸಂಪೂರ್ಣಬೂಮಿಯನ್ನು ಹಾಳುಗೆಡವಿದ್ದೇವೆ.ರಾಸಾಯನಿಕಗಳ ಬಳಕೆಯಿಂದಾಗಿ ಇಂದು ನಾವು ಬಳಸುತ್ತಿರುವ ಅಹಾರವೂ ಸಹ ವಿಷವಾಗಿದೆ.ಆದ್ದರಿಂದಲೇ ಗವಾಧಾರಿತವಾದ ಸಾವಯವಕೃಷಿಪದ್ಧತಿಗೆ ವ್ಯಾಪಕಪ್ರೋತ್ಸಾಹ ದೊರೆಯುತ್ತಿದೆ.ಈ ಎಲ್ಲ ಹಿನ್ನೆಲೆಯಲ್ಲಿಯೇ ವಿಶ್ವಗೋಸಮ್ಮೇಳನ,ವಿಶ್ವಮಂಗಲಗೋಯಾತ್ರೆ,ಮೊದಲಾದ ಕಾರ್ಯಕ್ರಮಗಳು ಗವ್ಯೋತ್ಪನ್ನ ಔಷಧಿಗಳ ತಯಾರಿಕೆಯನ್ನು ಶ್ರೀಮಠದವತಿಯಿಂದ ನಡೆಸಲಾಗುತ್ತಿದೆಯೆಂದೂ ಸಹ ಅವರು ಹೇಳಿದರು.