ಗುರುಸ್ಮರಣಪೂರ್ವಕ ವಂದನೆಗಳು
“ಅಶೋಕಾವನ” ಸಸ್ಯಸಾನುವಿನ ದಿವ್ಯತಾಣ.ಒಂದೆಡೆ ಸಮುದ್ರರಾಜನ ಭೋರ್ಗರೆತ.ಅದೂ ಅತಿವಿಶಿಷ್ಟವಾದ ಓಂಕಾರದ ಆಕೃತಿಯಲ್ಲಿ.ಇನ್ನೊಂದೆಡೆ ಪರಶಿವನೇ ಆತ್ಮಲಿಂಗರೂಪವಾಗಿ ತನ್ನೆಲ್ಲ ಪರಿವಾರದೊಂದಿಗೆ ನೆಲೆನಿಂತ ಭೂಮಂಡಲದ ಕೈಲಾಸ.ಮತ್ತೊಂದೆಡೆ ಜೀವಿಗಳಲ್ಲರ ಪಾಪ ಕಳೆವ ಅಘನಾಶಿನಿಯ ಸಮುದ್ರಸಂಗಮದ ಸುದೂರ ಪರಿಸರ.ಮಧ್ಯದಲ್ಲಿ ಮಲ್ಲಿಕಾರ್ಜುನನ ಸನ್ನಿಧಿ.ರಮಣೀಯವಾದ ಪಶುಪತಿ ತೀರ್ಥ.
ಇಂತಹ ದಿವ್ಯ-ಭವ್ಯ-ಚೇತೋಹಾರಿಯಾದ ಪೃಕೃತಿಮಾತೆಯ ಮಡಿಲನ್ನು ಶ್ರೀಶಂಕರಭಗವತ್ಪಾದರು ದರ್ಶಿಸುತ್ತಾರೆ.ಅದೂ ಜಾತಿವೈರ ಮರೆತ ಹುಲಿ-ಹುಲ್ಲೆಯ ಒಡನಾಟದೊಂದಿಗೆ.ಅಂತಹ ತಾಣಕ್ಕೊಂದು ಪೀಠ ಬೇಕೆಂದೋ,ತಾವು ಉದ್ದೇಶಿಸಿದ್ದ ಪೀಠಸ್ಥಾಪನೆಗೆ ಈ ತಾಣ ಯೋಗ್ಯವೆಂದೋ ನಿಶ್ಚಯಿಸಿ “ಶ್ರೀ ರಘೂತ್ತಮ ಪೀಠ” ವನ್ನಲ್ಲಿ ಸ್ಥಾಪಿಸುತ್ತಾರೆ.
ಹಾಗೆ ಸ್ಥಾಪನೆಗೊಂಡು ಬೆಳೆದ ‘ಶ್ರೀರಾಮಚಂದ್ರಾಪುರಮಠ’ಕ್ಕೆ ಮತ್ತು ಶ್ರೀಮಠದ ಶಿಷ್ಯ ಸಮೂಹಕ್ಕೆ “ಅಶೋಕೆ” ಆರಾಧ್ಯ ಸ್ಥಾನವಾಗುತ್ತದೆ,ತೀರ್ಥಕ್ಷೇತ್ರವಾಗುತ್ತದೆ,ಪರಮೋಚ್ಚ ನೆಲೆಯಾಗುತ್ತದೆ.
ಅಂತಹ ‘ಅಶೋಕೆ’ ಇಂದು ಹೇಗಿದೆ?ನಮ್ಮ ತೀರ್ಥಸ್ಥಾನವಾಗಿ ಉಳಿದಿಲ್ಲ.ನಾವಲ್ಲಿಗೆ ಹೋಗಿಲ್ಲ:ನಮಗದರ ಪರಿವೆಯಿಲ್ಲ:ಹಾಗಾಗಿ ಅದು ನಮ್ಮದಾಗಿರಲಿಲ್ಲ.
ನಮ್ಮ ಬದುಕಿನ ಪರಮೋಚ್ಚ ಸ್ಥಾನವನ್ನು ನಮ್ಮ ಉಪಾಸನಾ ಕ್ಷೇತ್ರವನ್ನಾಗಿ ಪುನರ್ನಿಮಿಸಿಕೊಳ್ಳಬೇಕಿದೆ.ಒಂದು ದೃಷ್ಟಿಯಿಂದ ನೋಡಿದಾಗ ಇದೊಂದು ಸದವಕಾಶವೂ ಹೌದು.ನಮ್ಮ ಪೂರ್ವಜರಿಗೆ ಇಂತದ್ದೊಂದು ಅವಕಾಶ ಲಭ್ಯವಿರಲಿಲ್ಲ.ನಾವಿದನ್ನು ನಿರ್ಮಿಸಿದ ನಂತರ ಅನಂತರ ನಮ್ಮ ಮುಂದಿನವರಿಗೂ ಇದು ಲಭ್ಯವಾಗದು .ಅಲ್ಲದೇ ಅವರಿಬ್ಬರೂ ಸಂತೋಷ ಪಡುವ ಸಾಧನೆಯೂ ಇದು ಹೌದು.ನಮ್ಮಿಂದ ಆಗದಿರುವುದನ್ನು ಇವರು ಸಾಧಿಸಿದರೆಂದು ಪೂರ್ವಜರ ಹೆಮ್ಮೆಯಾದರೆ ನಮ್ಮ ಹಿರಿಯರು ಇದನ್ನು ಸಾಧಿಸಿದರೆಂದು ಮುಂದಿನವರ ಅಭಿಮಾನ.
ಇದಲ್ಲದೇ ಇದು ಆದ್ಯಕರ್ತವ್ಯವೂ ಸಹ.ನಾವು ಜೀವಿಸಿರುವ ಈ ಕಾಲಘಟ್ಟದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಕಲ್ಪ ಗೈದಿದ್ದಾರೆ.ಪ್ರಥಮ ಬಾರಿಗೆ ಅನುಶಾಸನವೂ ನಡೆದಿದೆ.ಗುರುವಿನ ಅನುಶಾಸನವನ್ನು ತಲೆಯಮೇಲೆ ಹೊತ್ತು ನಡೆಸುವುದು ಶಿಷ್ಯರ ಆದ್ಯ ಕರ್ತವ್ಯ.ಆದ್ದರಿಂದಲೂ ನಾವಿದಕ್ಕೆ ಅಣಿಯಾಗಬೇಕಿದೆ.ಅಡಿಯಿಡಬೇಕಿದೆ,ಸಫಲರಾಗಬೇಕಿದೆ.
ನಮ್ಮ ಸಮಾಜದ ಈ ಪುಣ್ಯಕಾಶಿ ಹೇಗಿರಬೇಕು?ಎಂಬ ಬಗ್ಗೆ ಕೆಲವು ಯೋಜನೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.ಅವೆಲ್ಲವೂ ಯೋಜನೆಗಳಾಗಿ ಅನಂತರ ಕಾರ್ಯರೂಪಕ್ಕೆ ಬರಬೇಕಿದೆ.
ಮೂಲಸ್ಥಾನ ಪುನರ್ನಿಮಾಣದ ಕನಸಿನ ಸ್ವರೂಪ ಇಂತಿದೆ:-
1.ಶ್ರೀ ಮಲ್ಲಿಕಾರ್ಜುನ ದೇವಸ್ಥಾನ 1,25,00,000-0
2.ಪಶುಪತಿ ದೇವಾಲಯ
3.ಮಠ 3,25,00,000-00
4.ವಿದ್ಯಾಮಂದಿರ(ಗುರುನಿವಾಸ) 75,00,000-00
5.ಶಿಷ್ಯರು,ಅತಿಥಿಗಳು,ಸಿಬ್ಬಂದಿಗಳ ವಸತಿ 1,00,00,000-00
6.ಸಹಸ್ರ ನಂದಿ ಗೋಶಾಲೆ 2,00,00,000-00
7.ಗುರುಕುಲ 2,50,00,000-00
8.ಯೋಗಕೇಂದ್ರಗಳು 50,00,000-00
9.ಭೋಜನಶಾಲೆ 1, 50,00,000-00
10.ಸಭಾಭವನ 75,00,000-00
11.ಆಡಳಿತ ಕಾರ್ಯಾಲಯ 50,000-00
12.ಪರಿಸರ ಸೌಂದರ್ಯ ವರ್ಧನೆ 1,00,00,000-00
ಹೀಗೆ 15 ಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪನ್ನಗೊಳ್ಳಬೇಕಿದೆ.ನಮ್ಮ ಸಹಸ್ರ -ಸಹಸ್ರ ಕೈಗಳು ಒಂದಾಗಬೇಕಿದೆ.ಪ್ರತಿಯೋರ್ವ ಶಿಷ್ಯನು ತನ್ನ ಹತ್ತು ದಿನಗಳ ಗಳಿಕೆಯಾದ ವಾರ್ಷಿಕ ಶೇಕಡಾ 2.74% ರಷ್ಟನ್ನು ಮೂರು ವರ್ಷಗಳ ಕಾಲ ಸಲ್ಲಿಸುವ ಮೂಲಕ ನಮ್ಮೆಲ್ಲರ ಜೀವಮಾನದ ಮಹೋನ್ನತ ಕಾರ್ಯವನ್ನು ಸಾಧಿಸಬೇಕಿದೆ.
ಬನ್ನಿ ಸಾಧಿಸೋಣ.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು.
ಕೇಂದ್ರಪರಿಷತ್