

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
।। ಪಾತು ನಿತ್ಯಂ ಮಹಾಬಲಃ ।।
ಮಹಾಶಿವರಾತ್ರಿ 2013
ಆತ್ಮೀಯ ಭಗವದ್ಭಕ್ತರೇ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ನಂದನ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ.
ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ ಶ್ರೀ ರಾಮಚಂದ್ರಾಪುರ ಮಠವನ್ನು ಸ್ಥಾಪಿಸಿದ್ದು ಕೂಡ ಶ್ರೀ ಕ್ಷೇತ್ರದಲ್ಲಿಯೇ .
ಸಮಸ್ತ ಭಕ್ತರ ಆಪ್ತ ಸ್ಪರ್ಶ-ಅರ್ಚನೆಗಳಿಗೆ ನಿಲುಕುವ, ನಂಬಿದ ಭಕ್ತರನ್ನು ಕಡೆಗಣ್ಣ ನೋಟದಿಂದಲೇ ಕಾಯುವ ಈ ಜಗದೊಡೆಯನ ಆರಾಧನಾ ಪರ್ವ ‘ಮಹಾಶಿವರಾತ್ರಿ’. ಬದುಕಿನ ಎಲ್ಲ ಕತ್ತಲೆಗಳಿಗೆ ಮಂಗಳ ಹಾಡಿ ಸೌಭಾಗ್ಯದ ಶುಭೋದಯವನ್ನುಂಟುಮಾಡುವ ನಿಜವಾದ ಶಿವ-ರಾತ್ರಿಯ ಈ ಪವಿತ್ರ ಸಮಯಕ್ಕಾಗಿ ಶ್ರೀ ಕ್ಷೇತ್ರ ಗೋಕರ್ಣ ವಿಶಿಷ್ಟ ರೀತಿಯಲ್ಲಿ ಸಿದ್ಧಗೊಳ್ಳುತ್ತಿದೆ.
ಜೀವನೋತ್ಕರ್ಷಕ್ಕೆ ಕಾರಣವಾದ ಈ ಮಹೋತ್ಸವವು ಗೋಕರ್ಣ ಮಂಡಲಾಧೀಶ್ವರ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ನೇತೃತ್ವ ಹಾಗು ಸಾನ್ನಿಧ್ಯದಲ್ಲಿ 05-03-2013 ರಿಂದ 13-03-2013 ವರೆಗೆ ಒಂಬತ್ತು ದಿನಗಳಕಾಲ ಜರುಗಲಿದೆ. ಈ ಸಂದರ್ಭದಲ್ಲಿ ವಿವಿಧ ಅರ್ಚನೆ, ರುದ್ರ ಜಪಾದಿ ಧಾರ್ಮಿಕ ಸೇವಾ ಪ್ರಕಲ್ಪಗಳು ಸಂಪನ್ನಗೊಳ್ಳುವವು. ನಿರಂತರ ಅನ್ನದಾನ ರೂಪದ ‘ಅಮೃತಾನ್ನ’ ಪ್ರಸಾದ ಭೋಜನಾದಿಗಳು ಆಯೋಜಿತವಾಗಿವೆ.
ದಿನಾಂಕ 05-03-2013 ರಿಂದ 09-03-2013 ವರೆಗೆ ಶ್ರೀ ಶ್ರೀಗಳವರಿಂದ ಸಾಯಂಕಾಲ 06.00 ರಿಂದ 09.00 ವರೆಗೆ ಈ ಸಮಯದಲ್ಲಿ ‘ರಾಮಕಥಾ‘ ದೃಶ್ಯ-ಶ್ರಾವ್ಯ-ಚಿತ್ರ ಮಾಧ್ಯಮದಲ್ಲಿ ವಾಲ್ಮೀಕಿ ರಾಮಾಯಣದ ಪುನರವತರಣ.
ಈ ಮಹೋತ್ಸವದ ಸೇವಾ ವಿಭಾಗಗಳಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡು ಶಿವ ಸಂಪ್ರೀತಿಗೆ ಪಾತ್ರರಾಗಬಹುದು. ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕರಾಗಬಹುದು. ನಿರಂತರ ನಡೆಯುವ ‘ಅಮೃತಾನ್ನ’ ಯೋಜನೆಯಲ್ಲಿ ಪಾಲ್ಗೊಳ್ಳಬಹುದು.